Tuesday, September 11, 2007

ಸಂಕೇತಗಳ ಭಾರಕ್ಕೆ ಕುಸಿಯದ ಮೀಡಿಯಾ


ಜಾಗತೀಕರಣಕ್ಕೆ ಸಂವಾದಿಯಾಗಿ ನಾಟಕವೊಂದು ನಿಲ್ಲಬಹುದೇ? ಇದಕ್ಕುತ್ತರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತುಮರಿಯ ಕಿನ್ನರಮೇಳ ತಂಡ ಸಿದ್ಧಪಡಿಸಿರುವ ಯೂರಿಪಿಡೀಸ್‌ನ ‘ಮೀಡಿಯಾ’ ನಾಟಕದಲ್ಲಿದೆ.
ಜಾಗತೀಕರಣಕ್ಕೆ ಮುಖಾಮುಖಿಯಾಗಿ ಹಲವು ರಂಗಕೃತಿಗಳು ಬಂದುಹೋಗಿವೆ. ಇದಕ್ಕಾಗಿ ಹಲವು ಹೊಸ ಕೃತಿಗಳೂ ರಚನೆಯಾಗಿವೆ. ಆದರೆ ‘ಮೀಡಿಯಾ’ ನಾಟಕ ಉದಾರಿಕರಣದ ಪರಿಣಾಮಗಳ ಅತ್ಯಂತ ತುರ್ತು ಅಭಿವ್ಯಕ್ತಿಯಾಗಿ ಮೂಡಿಬಂದಿದೆ. ಗ್ರೀಕ್ ನಾಟಕಕಾರ ಯುರಿಪಿಡೀಸ್‌ನ ‘ಮೀಡಿಯಾ’ ರಂಗಭೂಮಿಯಲ್ಲಿ ಎಂದಿನಿಂದಲೂ ಬಹು ಚರ್ಚಿತ ನಾಟಕ. ಹಲವು ಸವಾಲುಗಳನ್ನು ಹೊಂದಿರುವ ಈ ಕೃತಿಯನ್ನು ಯಶಸ್ವಿಯಾಗಿ ರಂಗದ ಮೇಲೆ ತಂದ ತಂಡಗಳು ಕೆಲವೇ ಕೆಲವು. ಕನ್ನಡ ರಂಗಭೂಮಿಯಲ್ಲಂತೂ ಬೆರಳೆಣಿಕೆಯಷ್ಟು ಯಶಸ್ವಿ ಪ್ರದರ್ಶನಗಳಿವೆ.
ಹಿಂದೊಮ್ಮೆ ನೀನಾಸಂ ತಿರುಗಾಟಕ್ಕಾಗಿ ಬಿ.ವಿ. ಕಾರಂತರು ನಿರ್ದೇಶಿಸಿದ ಈ ನಾಟಕ ಕಾರಂತರ ಸಹಜ ಲಾಲಿತ್ಯವನ್ನೊಳಗೊಂಡು ಯಶಸ್ವಿ ಪ್ರದರ್ಶನವೆನಿಸಿತ್ತು. ಈಗ ತುಮರಿಯ ಕಿನ್ನರಮೇಳ ತಂಡವು ಈ ಕೃತಿಯ ಡಾ ಕೆ. ಮರುಳಸಿದ್ಧಪ್ಪನವರ ಅನುವಾದವನ್ನು ರಂಗದ ಮೇಲೆ ತಂದಿದೆ.
ಶಿವಮೊಗ್ಗದಲ್ಲಿ ಆಗಸ್ಟ್ ೨೨, ೨೦೦೭ರಂದು ಸಹ್ಯಾದ್ರಿ ರಂಗತರಂಗ ತಂಡವು ಡಿವಿಎಸ್ ರಂಗಮಂದಿರದಲ್ಲಿ ಈ ನಾಟಕವನ್ನು ಆಯೋಜಿಸಿತ್ತು.
ಕಾರಂತರು ಈ ನಾಟಕ ನಿರ್ದೇಶಿಸಿದ ಕಾಲ, ಇಂದಿನ ಕಾಲದ ನಡುವೆ ಹಲವು ಸ್ಥಿತ್ಯಂತರಗಳಿವೆ. ಇಂದೂ ಸಹ ಪ್ರಸ್ತುತವಾಗುವಂತೆ ನಿರ್ದೇಶಿಸುವುದು ಹೊಸ ಸವಾಲು. ಅದನ್ನು ಕಿನ್ನರ ಮೇಳದ ತಂಡ ಸಾಮ್‌ಕುಟ್ಟಿ ಪಟ್ಟಾಂಕರಿ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿದೆ ಎನ್ನುವುದೇ ಈ ಪ್ರಯೋಗದ ವಿಶೇಷ.
ಭಾವೋದ್ವೇಗದ ಹೆಣ್ಣು ಮೀಡಿಯಾ ತನಗೆ ದ್ರೋಹವೆಸಗಿ ಮರುಮದುವೆ ಮಾಡಿಕೊಂಡ ಗಂಡ ಜೇಸನ್, ಆತನ ನವವಧು, ಹಾಗೂ ಅವಳ ತಂದೆ ಕ್ರೆಯಾನನ ಮೇಲೆ ಸೇಡು ತೀರಿಸಿಕೊಂಡಿದ್ದರ ಕಥೆ.
ಕ್ರೆಯಾನ್ ಪಾತ್ರಧಾರಿ (ಕೆ.ಜಿ. ಕೃಷ್ಣಮೂರ್ತಿ) ಸೂಟುಬೂಟು ಧರಿಸಿ ರಾಜನಂತೆ ರಂಗ ಮೇಲೆ ಬರುವುದು, ಮೀಡಿಯಾ ಮಕ್ಕಳಿಗೆ ಏಜಿಯಸ್ (ರಘುರಾಮ) ‘ಅಮೇರಿಕಾ ಧೀಕ್ಷೆ’ ನೀಡುವುದು, ಅದಕ್ಕಾಗಿ ಪೆಪ್ಸಿ ಬಾಟಲಿ ಬಳಸುವುದು, ದೂತ ‘ಮೀಡಿಯಾ....’ ಎಂದು ಕೂಗಿದಾಗ ಪತ್ರಕರ್ತರು, ಟೀವಿ ಪತ್ರಕರ್ತರು ರಂಗದ ಮೇಲೆ ಬರುವುದು.. ಇತ್ಯಾದಿ ಇಂಟರ್ಪ್ರಿಟೇಶನ್‌ಗಳು ನಾಟಕವನ್ನು ಇಂದಿನ ಕಾಲಕ್ಕೆ ತರುತ್ತದೆ.
ಮೀಡಿಯಾ ತನ್ನ ನೋವನ್ನು ಅಭಿವ್ಯಕ್ತಿಸುವಾಗ ಅದನ್ನು ಅಲಕ್ಷಿಸಿ ನಿಂತ ಕ್ರೆಯಾನ್ ಅವಳ ಮೇಲೆಯೇ ಅನುಮಾನ ಪಡುತ್ತಾನೆ. ಆಗ ಮೀಡಿಯಾ ರಾಜ್ಯವನ್ನು ಬಿಟ್ಟು ಹೊರಹೋಗಲು ನಿರ್ಧರಿಸುತ್ತಾಳೆ. ತನ್ನ ಮಕ್ಕಳ ಮೇಲೆ ಯಾವ ಕಷ್ಟವೂ ಬರದಿರಲಿ ಎಂದು ಅವರನ್ನೇ ಕೊಲ್ಲುತ್ತಾಳೆ. ಮೀಡಿಯಾಳ ಭಾವೋದ್ವೇಗ, ಆಕ್ರೋಶ, ಆತಂಕಗಳನ್ನು ಸುಶೀಲಾ ಕೆಳಮನೆ ಅತ್ಯಂತ ಸಮರ್ಥವಾಗಿ ಹಿಡಿದಿಟ್ಟರು.
ರಂಗಸಜ್ಜಿಕೆ ಸರಳವಾಗಿ ಕಂಡರೂ ಇದ್ದೊಂದೇ ಪುಟ್ಟ ವೇದಿಕೆಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡ ರೀತಿ ಅದ್ಭುತ. ಪಾತ್ರಗಳ ಪ್ರವೇಶ, ನಿರ್ಗಮನ ಸಂದರ್ಭದಲ್ಲಿ ಸಂಯೋಜಿಸಿದ ನೃತ್ಯ-ಸಂಗೀತ ರಂಗಕ್ಕೆ ತಕ್ಕಂಥ ವಾತಾವರಣ ನಿರ್ಮಿಸಿತು.
ಮೊದಲಿನಿಂದ ಕೊನೆಯ ವರೆಗೂ ಜಾಗತೀಕರಣದ ಸಂಕೇತಗಳು ರಂಗದ ಮೇಲೆ ಬರುತ್ತಲೇ ಇದ್ದವು. ಸಂಕೇತಗಳ ಭಾರಕ್ಕೆ ನಾಟಕ ಕುಸಿಯದೇ ಉಳಿದಿದ್ದೇ ಪ್ರಯೋಗದ ಸಾರ್ಥಕತೆಯಾಗಿತ್ತು.

Tuesday, May 15, 2007

ಪದ ಕೇಳಿ ಬಿಕ್ಷಾ ನೀಡವ್ವ.....

ಬುದ್ದಿ ಮಾತು ಹೇಳಿದರೆ ಕೇಳಬೇಕಮ್ಮ
ಮನ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ


ಹಾಡು ಕೇಳುತ್ತಿದ್ದಂತೆ ದಾಸಪ್ಪ ಬಂದ್ರು, ಏನಾದ್ರು ಇದ್ರೆ ನೀಡಮ್ಮ ಎಂದು ಮನೆಯ ಯಜಮಾನರು ಹೇಳುತ್ತಾರೆ. ಪರಿಚಯದ ನಗು ಬೀರುತ್ತಾ ಹೆಣ್ಣುಮಕ್ಕಳು ಕೊಟ್ಟಿದ್ದನ್ನು ತನ್ನ ಜೋಳಿಗೆಗೆ ಹಾಕಿಕೊಂಡು ದಾಸಪ್ಪ ಮುಂದಿನ ಮನೆಗೆ ಸಾಗುತ್ತಿದ್ದರು.
ಅಲ್ಲಿ ಮತ್ತೆ ಬೇರೆ ಹಾಡು,

ರಾಗಿ ತಂದೀರಾ
ಬಿಕ್ಷಕೆ ರಾಗಿ ತಂದೀರಾ


ಹೀಗೆ ಸಾಗುತ್ತದೆ ದಾಸಪ್ಪನ ದಿನಚರಿ.
ಈಗ ಯೌವನದಲ್ಲಿರುವ ನಮ್ಮೂರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬಹುತೇಕ ಎಲ್ಲರೂ ಈ ದಾಸಪ್ಪನ ಹಾಡುಗಳನ್ನು ತಿಂಗಳಿಗೊಮ್ಮೆ ಕೇಳುತ್ತಲೇ ಬೆಳೆದಿದ್ದಾರೆ. ದೇಹದ ಶಕ್ತಿಯಲ್ಲಿ ಸ್ವಲ್ಪ ಕುಂದಿದ್ದರೂ ಹಾಡುಗಳ ಶಕ್ತಿ ಇಳಿದಿಲ್ಲ. ದಾಸಪ್ಪ ಬಂದಾಗಲೊಮ್ಮೆ ಹಾಡನ್ನು ಕೇಳಿ ಮನೆಯಲ್ಲಿದ್ದನ್ನು ನೀಡಿ ಬೀಳ್ಕೊಡುವರೇ ಎಲ್ಲರು. ಹೊನ್ನಾಳಿಗರ ಬಾಯಲ್ಲಿ ‘ಪೀಯ್ಯಂಪೆಟ್ಟಿಗಿ’ ಅಂತಲೇ ಕರೆಸಿಕೊಳ್ಳುವ ನಾದದ ಅಕ್ಷಯಪಾತ್ರೆ ಹಾರ್‍ಮೋನಿಯಂ ಹಿಡಿದು ಊರೆಲ್ಲಾ ಸುತ್ತಿ ಬರುವ ಈ ದಾಸಪ್ಪ ಯಾರು ಅಂತ ಪ್ರಶ್ನೆ ಕೇಳಿಕೊಂಡವರು ಯಾರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
ದಾಸಪ್ಪ ಬರೀ ದಾಸಪ್ಪನಲ್ಲ. ಎಲ್ಲರ ಬಾಯಲ್ಲಿ ದಾಸಪ್ಪನೆಂದು ಕರೆಸಿಕೊಂಡ ಇವರು ಒಂದು ಕಾಲದಲ್ಲಿ ಬಯಲುಸೀಮೆಯ ಖ್ಯಾತ ನಾಟಕ ಕಲಾವಿದ. ಹೊಸಕುಂದವಾಡದ ರಾಜರಾಜೇಶ್ವರಿ ನಾಟಕ ಮಂಡಳಿ ಎಂಬ ವೃತ್ತಿಪರ ನಾಟಕ ಕಂಪನಿಯ ವಿಜೃಂಬಣೆಯ ದಿನಗಳಲ್ಲಿ ತರತರದ ಪಾತ್ರ ನಿರ್ವಹಿಸಿ ಈಗ ಬೀದಿಗೆ ಬಿದ್ದಿರುವ ಈ ಕಲಾವಿದನ ನಿಜವಾದ ಹೆಸರು ಹನುಮಂತಪ್ಪ. ರಾಣೇಬೆನ್ನೂರು ಸಮೀಪದ ಹಳ್ಳೂರು ಸ್ವಸ್ಥಾನ. ನಿಜವಾದ ಹೆಸರು ಯಾರಿಗೂ ಪರಿಚಯವಿಲ್ಲ. ದಾಸಪ್ಪ ಅಂತಲೇ ಎಲ್ಲರ ಬಾಯಲ್ಲಿ.
ಜೀವನ ನಿರ್ವಹಣೆಗಾಗಿ ಬಿಕ್ಷುಕ ಪಾತ್ರ ದರಿಸಿದ್ದ ಈ ವ್ಯಕ್ತಿ ತನ್ನ ನಾಟಕದ ದಿನಗಳ ನೆನಪನ್ನು ಮನೆಗಳ ಮುಂದೆ ಹಾಡುಗಳಾಗಿ ಹರಿಸುತ್ತಾ ಸಾಗುತ್ತಿದ್ದರು.
‘ಕಬೀರ, ತುಕಾರಾಮ, ಸುಲೋಚನಾ, ಮಹಾಭಾರತ, ಸೇರ್‍ದಂಗೆ ಬಾಳ ನಾಟಕ ಮಾಡಿದ್ವಿ ಬಿಡ್ರಿ. ಮೈಲಾರ, ಚಂದ್ರಗುತ್ತಿ, ಎಲ್ಲೇ ಜಾತ್ರಿ ನಡೀಲಿ ನಮ್ ಕಂಪ್ನಿ ಅಲ್ಲಿರ್‍ತಿತ್ತು. ಆ ಕಾಲನೇ ಬ್ಯಾರಿತ್ತು. ನಾಟಕದ ಹುಚ್ಚಿಗ್ ಬಿದ್ದು ಎಲ್ಲೆಂದ್ರಲ್ಲಿ ಸುತ್ತಾಡಿದ್ವಿ.’
ಕೂರಿಸಿಕೊಂಡು ಕೇಳಿದಾಗ ಹಾಡುಗಳಂತೆ ದಾಸಪ್ಪನ ಮಾತುಗಳೂ ಹರಿಯುತ್ತವೆ.
‘ರೇಣುಕ ರಾಜ ಅಂತ ಒಂದ್ ನಾಟ್ಕ ಮಾಡಿದ್ವಿ. ಏನ್ ಜನ ಮೆಚ್ಚಿದ್ರು ಅಂದ್ರೆ ಹೇಳಬಾರ್‍ದು ಬಿಡ್ರಿ. ಅದೆಲ್ಲಾ ಈಗೆಲ್ಲಿ? ಒಂದ್ ದಿನ ಕಂಪನಿ ಮುಚ್ಚೋತು. ಎಲ್ಲಾ ಬೀದಿಗೆ ಬಿದ್ವಿ. ಕಲ್ತ ಪದ ಮೈಗೆ ಅಂಟ್ಕಂಡೇ ಇದ್ವು. ಅದೇ ಈಗ ಹೊಟ್ಟೆಪಾಡಾಗೇತಿ.’
ನಿಟ್ಟುಸಿರು ಬಿಟ್ಟ ದಾಸಪ್ಪ ಮುಂದೆ ಸಾಗುತ್ತಾರೆ.
ನಾಟ್ಕದೋರಿಗೆ ಅದೇನೋ ದುಡ್ಡು ಕೊಡ್ತಾರಂತೆ ಸರ್ಕಾರದೋರು ಅಂತಾ ಈ ಕಲಾವಿದ ಬರೆಯದ ಅರ್ಜಿಗಳಿಲ್ಲ. ಕಾಣದ ಅಧಿಕಾರಿ ಇಲ್ಲ. ಆದರೂ...‘ಅವರ ಹತ್ರಾನೂ ಬಿಕ್ಷೆ ಕೇಳ್ದಂಗೇ ಆತು’ ಎನ್ನುತ್ತಾರೆ. ನಾಟಕ ರಂಗದ ಮೇಲೆ ಪರಮೇಶ್ವರನ ಪಾತ್ರ ಹಾಕಿ ಮೆರೆದ ಹನುಮಂತಪ್ಪ ಈಗ ದಾಸಪ್ಪ.
ಈಗ ಅದರ ಉಸಾಬರಿನೇ ಬೇಡ ಅಂತಾ ದಾಸಪ್ಪ ಹಾಡುತ್ತಾ ಮುಂದೆ ಸಾಗುತ್ತಾರೆ.

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಗಳ ಗುಳ್ಳೆ ನಿಜವಲ್ಲ ಹರಿಯೇ
ನಿಜವಲ್ಲ ಹರಿಯೇ


ದಾಸಪ್ಪನ ಈ ‘ಪೀಯ್ಯಂಪೆಟ್ಗಿ’ ಹಾಡುತ್ತಲೇ ಇತ್ತು. ಇವತ್ತು ಈ ದಾಸಪ್ಪ ಎಲ್ಲಿದ್ದಾರೆ? ಈಗಿನ ಹುಡುಗರು ನಮ್ಮೂರಲ್ಲಿ ಇವರ ಹಾಡುಗಳನ್ನು ಕೇಳಿದ್ದಾರೆಯೇ?.

Tuesday, May 8, 2007

ಗುಣಮುಖ


ಇದು ಪಿ. ಲಂಕೇಶ್ ಅವರ ಗುಣಮುಖ ನಾಟಕದ ಒಂದು ಫೋಟೊ.... ಶಿವಮೊಗ್ಗದಲ್ಲಿ ಪ್ರದರ್ಶನ ಕಂಡಿತು.

ಮತ್ತದೆ ಬೇಸರ...

ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....

ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ.

ಇದೇ ದಾಟಿಯ, ಹಿಂದಿಯ ಬಹು ಜನಪ್ರಿಯ.... ಫಿರ್ ವಹಿ ಶಾಮ್... ವಹಿ ಗಂ... ವಹಿ ತನಹಾಯಿ.... ಇದು ನಿಮ್ಮನ್ನು ಕಾಡಿರಬಹುದು. ನೆನಪಿಸಿಕೊಳ್ಳಿ....